ನಮಸ್ತೆ.
ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!
ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.
ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು.
ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೧
ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.
ಸಂಚಿಕೆ ೨
ಇಂದ್ರ ಚಂದ್ರ ಅನ್ನು : ಅತಿಯಾಗು ಹೊಗಳು
ಇಕ್ಕಳ ಹಾಕು : ಒತ್ತಾಯದ ಪ್ರಚೋದನೆ ಮಾಡು
ಇತಿಶ್ರೀ : ಮುಕ್ತಾಯ, ಕೊನೆ
ಇಲ್ಲಿಯ ಕಡ್ಡಿಯನ್ನು ಅಲ್ಲಿ ಎತ್ತಿ ಇಡದಿರು : ಯಾವ ಕೆಲಸವನ್ನೂ ಮಾಡದಿರು
ಇಹಲೋಕದ ಯಾತ್ರೆ ಮುಗಿಸು : ಸಾಯು
ಉಕ್ಕಿನ ಕಡಲೆ : ತುಂಬಾ ಗಹನವಾದ ಸಂಗತಿ, ಅತ್ಯಂತ ಕಠಿಣವಾದ ವಿಷಯ
ಉತ್ಸವಮೂರ್ತಿ : ಚೆಲುವ, ಕೆಲಸ ಮಾಡದೇ ಆಲಸ್ಯದಿಂದಿರುವವನು
ಉಪ್ಪಿಡು : ಅನ್ನ ಹಾಕು, ಕಾಪಾಡು
ಉಪ್ಪಿಲ್ಲ ಹುಳಿಯಿಲ್ಲ : ನೀರಸವಾದುದು, ಸ್ವಾರಸ್ಯವಿಲ್ಲದ್ದು
ಉಪ್ಪು ಖಾರ ಹಚ್ಚು : ಇಲ್ಲದ್ದನ್ನು ಸೇರಿಸು
ಉಭಯಸಂಕಟ : ಸಂದಿಗ್ಧ ಸ್ಥಿತಿ
ಉರಿದು ಬೀಳು : ಬಹುವಾಗಿ ರೇಗು
ಉರಿ ಹೊತ್ತಿಸು : ತುಂಬಾ ರೇಗಿಸು, ವೈಷಮ್ಯ ಹುಟ್ಟಿಸು
ಎಂಜಲಿಗೆ ಕೈಯ್ಯೊಡ್ಡು : ಹಂಗಿಗೆ ಒಳಗಾಗು
ಎಂಜಲು ಕೈಯ್ಯಲ್ಲಿ ಕಾಗೆ ಓಡಿಸದವ : ಜಿಪುಣ
ಎಕ್ಕ ಹುಟ್ಟಿ ಹೋಗು : ಹಾಳಾಗು
ಎಡವಿದ ಕಡ್ಡಿ ಎತ್ತದಿರು : ಸೋಮಾರಿಯಾಗು, ಎತ್ತಂಗಡಿಯಾಗು, ವರ್ಗವಾಗು, ದಿವಾಳಿ ತೆಗೆ
ಎತ್ತಿದ ಕೈ : ಪ್ರವೀಣ
ಎತ್ತಿದವರ ಕೈಗೂಸು : ಸ್ವ ಬುದ್ಧಿ ಇಲ್ಲದವ
ಎದುರು ಹಾಕಿಕೊಳ್ಳು : ವಿರೋಧ ಕಟ್ಟಿಕೊಳ್ಳು
ಎದೆಗಟ್ಟಿ ಮಾಡಿಕೊಳ್ಳು : ಧೈರ್ಯ ತಂದುಕೊಳ್ಳು
ಎದೆತಟ್ಟಿ ಹೇಳು : ಧೈರ್ಯದಿಂದ ಹೇಳು
ಎದೆತುಂಬಿಬರುವುದು : ಭಾವೋದ್ವೇಗವುಂಟಾಗುವುದು
ಎದೆಭಾರವಾಗುವುದು : ದುಃಖವಾಗುವುದು
ಎದೆಮಾಡು : ಸಾಹಸಮಾಡು
ಎದೆಯ ಮೇಲಿನ ಭಾರ ಇಳಿಸು : ಹೊಣೆಗಾರಿಕೆ ಕಡಿಮೆ ಮಾಡಿಕೊಳ್ಳು
ಎದೆಯ ಮೇಲೆ ಕುಳಿತುಕೊಳ್ಳು : ಮೇಲ್ವಿಚಾರಣೆ ನಡೆಸಿ ಕೆಲಸ ತೆಗೆದುಕೊಳ್ಳು, ಅತಿ ಅವಸರ ಪಡಿಸು